Skip to main content

Sri Vishnu Sahasranama meaning - Kannada

Lord Vishnu is the preserver and upholder of dharma in Hinduism. He is the  supreme self in Vaishnavism and Vishnu in essence means the giver and  provider of things. Being a part

ವಿಷ್ಣು ಸಹಸ್ರನಾಮಕ್ಕೆ ಪರಿಚಯವೇ ಬೇಕಿಲ್ಲ. ಮಹಾಭಾರತದ ಅನುಶಾಸನ ಪರ್ವದಲ್ಲಿ ಬರುವ ಈ ಮಹಾನ್ ಸ್ತೋತ್ರವನ್ನು ವೇದವ್ಯಾಸ ಮಹರ್ಷಿಗಳು ನಮಗೆ ಭೀಷ್ಮ-ಯುಧಿಷ್ಟಿರರ ಸಂವಾದದ ಮೂಲಕ ನೀಡಿದ್ದಾರೆ. ಈ ಪ್ರಸಂಗವನ್ನು ವೈಶಂಪಾಯನರು ಜನಮೇಜಯನಿಗೆ ವಿವಿರಿಸುತ್ತಿರುವುದಾಗಿ ವ್ಯಾಸರು ತಿಳಿಸಿರುತ್ತಾರೆ. 

ಈ ವಿಷ್ಣುಸಹಸ್ರನಾಮವನ್ನು “ಸ್ತೋತ್ರ” ಎಂದೂ, “ಮಂತ್ರ” ಎಂದೂ ಕರೆಯುತ್ತಾರೆ. ಏಕೆಂದರೆ ಇದು ಕೇವಲ ಹೊಗಳಿಕೆಯ ಕಾವ್ಯವಲ್ಲ; ಮಂತ್ರಸ್ವರೂಪವಾದ ದಿವ್ಯ ನಾಮಸಂಕೀರ್ತನೆ.

ಈ ಸ್ತೋತ್ರದಲ್ಲಿ ಸುಮಾರು 107 ಶ್ಲೋಕಗಳಿದ್ದು, ಅವುಗಳಲ್ಲಿ ಸಹಸ್ರ, ಅಂದರೆ ಸಾವಿರ, ನಾಮಗಳು ಬರುತ್ತವೆ. ಆದರೆ ಇಲ್ಲಿ “ಸಾವಿರ” ಎಂದರೆ ಕೇವಲ ಲೆಕ್ಕಕ್ಕೆ ಸಾವಿರವೆಂದು ಅರ್ಥಮಾಡಿಕೊಳ್ಳಬಾರದು; ಅನಂತ ಗುಣ, ಅನಂತ ರೂಪ, ಅನಂತ ಮಹಿಮೆಗಳ ಸೂಚಕವಾಗಿ “ಸಹಸ್ರ” ಎಂಬ ಪದ ಬಂದಿದೆ. ಶ್ರೀ ವಿಷ್ಣುವಿನ ಅನೇಕ ರೂಪಗಳು, ಗುಣಗಳು, ಕಾರ್ಯಗಳು, ಕರುಣೆ, ಶಕ್ತಿ, ಇವೆಲ್ಲವನ್ನೂ ಒಳಗೊಂಡ ಅದ್ಭುತ ದಿವ್ಯ ಕೃತಿ ಇದಾಗಿದೆ.  ಆದ್ದರಿಂದ ಇದನ್ನು "ಸಾವಿರಾರು" ಎಂದೇ ತಿಳಿಯಬೇಕು


ಧರ್ಮರಾಜ ಕೇಳುತ್ತಾನೆ: “ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ?” ಎಲ್ಲ ಧರ್ಮಗಳಲ್ಲಿಯೂ ಶ್ರೇಷ್ಠವಾದ ಧರ್ಮ ಯಾವುದು?

ಅದಕ್ಕೆ ಭೀಷ್ಮರು ಉತ್ತರಿಸುತ್ತಾ: “ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಂ । ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ ॥” - ಈ ಜಗತ್ತಿನ ಪ್ರಭುವಾದ, ದೇವತೆಗಳಿಗೂ ದೇವನಾದ, ಅನಂತನಾದ, ಪುರುಷೋತ್ತಮನಾದ ಶ್ರೀಮನ್ನಾರಾಯಣನನ್ನು ಸಹಸ್ರನಾಮಗಳಿಂದ ಸ್ತುತಿಸುವುದೇ ಮಹಾಧರ್ಮ ಎಂದು ಅವರು ಹೇಳುತ್ತಾರೆ.

ಮುಂದೆ: “ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಂ ।ಧ್ಯಾಯನ್ ಸ್ತುವನ್ ನಮಸ್ಯಂಶ್ಚ ಯಜಮಾನಸ್ತಮೇವ ಚ ॥” - ಅವನನ್ನೇ ನಿತ್ಯವೂ ಭಕ್ತಿಯಿಂದ ಆರಾಧಿಸುವುದು, ಧ್ಯಾನಿಸುವುದು, ಸ್ತುತಿಸುವುದು, ನಮಸ್ಕರಿಸುವುದು. ಇದೇ ಶ್ರೇಷ್ಠ ಮಾರ್ಗ. ಹೀಗಾಗಿ ಭೀಷ್ಮರ ನಿರ್ಣಯ ಸ್ಪಷ್ಟ: “ಏಷ ಮೇ ಸರ್ವಧರ್ಮಾಣಾಂ ಧರ್ಮೋऽಧಿಕತಮೋ ಮತಃ” -- “ಎಲ್ಲ ಧರ್ಮಗಳಲ್ಲಿಯೂ ಇದುವೇ ಶ್ರೇಷ್ಠ ಧರ್ಮ” ಎಂದು.

ಅಂದರೆ ಶ್ರೀ ಕೃಷ್ಣನ, ಶ್ರೀಮಹಾವಿಷ್ಣುವಿನ ದಿವ್ಯನಾಮಗಳನ್ನು ಸ್ಮರಿಸುವುದು, ಪಠಿಸುವುದು, ಭಜಿಸುವುದು. ಇದಕ್ಕಿಂತ ಮೇಲಿನ ಧರ್ಮವೇ ಇಲ್ಲ ಎಂದು ಭೀಷ್ಮರು ಉಪದೇಶಿಸುತ್ತಾರೆ.


ವಿಷ್ಣು ಸಹಸ್ರನಾಮ ಮಂಗಳಾಚರಣೆ


शुक्लाम्बरधरं विष्णुं शशिवर्णं चतुर्भुजम् ।

प्रसन्नवदनं ध्यायेत् सर्वविघ्नोपशान्तये ॥


ಬಿಳಿ ವಸ್ತ್ರ ಧರಿಸಿದ, ಚಂದ್ರನಂತೆ ಪ್ರಕಾಶಮಾನನಾದ, ನಾಲ್ಕು ಭುಜಗಳನ್ನು ಹೊಂದಿದ, ಸದಾ ಪ್ರಸನ್ನಮುಖನಾದ ವಿಷ್ಣುವನ್ನು ಎಲ್ಲಾ ವಿಘ್ನಗಳು ಶಾಂತಿಯಾಗಲೆಂದು ಧ್ಯಾನಿಸಬೇಕು.


“ಶುಕ್ಲ” ಎಂದರೆ “ಬಿಳಿ”ಯೆಂದಾದರೂ, ಅದು ಸತ್ವಗುಣ ಸಂಕೇತ. ಭಗವಂತನ ವಸ್ತರ ಆಕಾಶವೇ ಸರಿ. ಸರ್ವವ್ಯಪಿಯಾದ ಭಗವಂತನಿಗೆ ನಿಗದಿತ ವಸ್ತ್ರವಿರಲು ಸಾಧ್ಯವೇ?ಶಶಿವರ್ಣ ಆ ಭಗವಂತನ ಗುಣ ಸಂಕೇತ, ನೆನದವರ ತಾಪವನ್ನು ತೆಗೆದು ತಂಪನ್ನು ಈಯುವ ಆ ಭಗವಂತನ ವರ್ಣ ಶಶಿವರ್ಣ. ಎಲ್ಲಾ ದಿಕ್ಕಿನಲ್ಲೂ ಹರಡಿರುವ ಅವನು ಚತುರ್ಭುಜನು. ಸದಾ ಆನಂದಮಯನಾದ ಅವನು ಪ್ರಸನ್ನವದನನು, ಏಕೆಂದರೆ ಅವನಿಗೆ “ಬೇಕು” ಎಂಬುದೇ ಇಲ್ಲ. ಅವನ ಧ್ಯಾನ ಮಾತ್ರದಿಂದ ನಮಗೂ ಆ ಗುಣಗಳ ಒಂದು ಲವಮಾತ್ರವಾದರೂ ದಕ್ಕೀತೇನೊ.


व्यासं वसिष्ठनप्तारं शक्तेः पौत्रमकल्मषम् ।

पराशरात्मजं वन्दे शुकतातं तपोनिधिम् ॥


ವಶಿಷ್ಠನ ಮೊಮ್ಮಗನಾದ, ಶಕ್ತಿ ಮಹರ್ಷಿಯ ಮರಿಮೊಮ್ಮಗನಾದ, ಪರಾಶರರ ಪುತ್ರನಾದ, ಪಾಪರಹಿತನಾದ, ಮಹಾತಪಸ್ವಿಯಾದ, ಹಾಗೂ ಶುಕನ ತಂದೆಯಾದ ವ್ಯಾಸ ಮಹರ್ಷಿಗಳಿಗೆ ನಮಸ್ಕಾರ! 



व्यासाय विष्णुरूपाय व्यासरूपाय विष्णवे ।

नमो वै ब्रह्मनिधये वासिष्ठाय नमो नमः ॥


ವ್ಯಾಸರು ವಿಷ್ಣುವಿನ ರೂಪವೇ ಆಗಿದ್ದಾರೆ; ವಿಷ್ಣುವೇ ವ್ಯಾಸರ ರೂಪದಲ್ಲಿ ವ್ಯಕ್ತರಾಗಿದ್ದಾರೆ.

ವೇದಜ್ಞಾನದ ಭಂಡಾವು ಆ ವಾಸಿಷ್ಠ-ಕುಲೋದ್ಭವರಾದ ವ್ಯಾಸಮುನಿಗಳಿಗೆ ಪುನಃ ಪುನಃ ನಮಸ್ಕಾರ.



अविकाराय शुद्धाय नित्याय परमात्मने ।

सदैकरूपरूपाय विष्णवे सर्वजिष्णवे ॥


ಯಾವ ಬದಲಾವಣೆಗಳಿಗೂ ಒಳಪಡುವದಿಲ್ಲದ, ಶುದ್ಧಸ್ವರೂಪನಾದ, ನಿತ್ಯನಾದ, ಪರಮಾತ್ಮನಾದ, ಸದಾ ಒಂದೇ ದಿವ್ಯಸ್ವರೂಪದಲ್ಲಿರುವ, ಸರ್ವವಿಜಯಿಯಾದ ಶ್ರೀವಿಷ್ಣುವಿಗೆ ನಮಸ್ಕಾರ.



यस्य स्मरणमात्रेण जन्मसंसारबन्धनात् ।

विमुच्यते नमस्तस्मै विष्णवे प्रभविष्णवे ॥


ಯಾರ ಸ್ಮರಣೆ ಮಾತ್ರದಿಂದಲೇ ಜೀವಿ ಜನನ–ಮರಣರೂಪ ಸಂಸಾರಬಂಧನದಿಂದ ಮುಕ್ತನಾಗುತ್ತಾನೋ, ಆ ಪ್ರಭುವಾದ ವಿಷ್ಣುವಿಗೆ ನಮಸ್ಕಾರ.



ॐ नमो विष्णवे प्रभविष्णवे ॥


ಓಂ — ಸರ್ವವ್ಯಾಪಿಯಾದ, ಸೃಷ್ಟಿಗೆ ಕಾರಣನಾದ, ಎಲ್ಲದಲ್ಲಿಯೂ ಪ್ರವೇಶಿಸಿರುವ ಶ್ರೀವಿಷ್ಣುವಿಗೆ ನಮಸ್ಕಾರ.


ಈ ಆರಂಭದ ಶ್ಲೋಕಗಳು ಕೇವಲ ಮಂಗಳಾಚರಣೆಯಲ್ಲ; ಅವು ಸಂಪೂರ್ಣ ವಿಷ್ಣು ಸಹಸ್ರನಾಮದ ಮನೋಭಾವವನ್ನು ಸ್ಥಾಪಿಸುತ್ತವೆ — ಧ್ಯಾನ, ಪರಮಾತ್ಮತತ್ತ್ವ, ಮತ್ತು ನಾಮಸ್ಮರಣೆಯ ಮಹಿಮೆ.


ಯುಧಿಷ್ಠಿರನ ಪ್ರಶ್ನೆ

ಶ್ರೀ ವೈಶಂಪಾಯನ ಉವಾಚ ।
ಶ್ರುತ್ವಾ ಧರ್ಮಾನ್ ಅಶೇಷೇಣ ಪಾವನಾನಿ ಚ ಸರ್ವಶಃ ।
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭಾಷತ ॥

ಅರ್ಥ:
ಶ್ರೀ ವೈಶಂಪಾಯನರು ಹೀಗೆ ಹೇಳಿದರು:
ಪಾವನವಾದ ಧರ್ಮಗಳನ್ನು ಸಂಪೂರ್ಣವಾಗಿ, ಎಲ್ಲ ರೀತಿಯಲ್ಲಿಯೂ ಕೇಳಿದ ನಂತರ, ಯುಧಿಷ್ಠಿರನು ಶಾಂತನವನಾದ ಭೀಷ್ಮನನ್ನು ಮತ್ತೆ ಹೀಗೆಂದು ಪ್ರಶ್ನಿಸಿದನು.

ಇಲ್ಲಿ ವೈಶಂಪಾಯನರು ಜನಮೇಜಯನಿಗೆ ನಿರೂಪಿಸುತ್ತಾ ಹೇಳುತ್ತಾರೆ. ಧರ್ಮರಾಜ ಯುಧಿಷ್ಠಿರ ಭೀಷ್ಮರಲ್ಲಿ ಈಗಾಗಲೇ ಅನೇಕ ವಿಧದ (ರಾಜಧರ್ಮ, ಆಪದ್ಧರ್ಮ, ದಾನಧರ್ಮ, ನೀತಿಶಾಸ್ತ್ರ, ಅರ್ಥಶಾಸ್ತ್ರ, ಯುದ್ಧನೀತಿ, ಜೀವನಪದ್ಧತಿ) ಧರ್ಮಗಳ ಬಗ್ಗೆ ಕೇಳಿದ್ದಾನೆ. ಆದರೆ ಅವನ ಮನಸ್ಸಿನ ಅಂತಿಮ ಪ್ರಶ್ನೆ ಇನ್ನೂ ಉಳಿದೇ ಇರುತ್ತದೆ:


“ಇವೆಲ್ಲಕ್ಕೂ ಮೀರಿದ ಧರ್ಮ ಯಾವುದು?
ಮಾನವನನ್ನು ಪರಮಶ್ರೇಯಸ್ಸಿಗೆ ಕರೆದೊಯ್ಯುವ ಸರ್ವೋತ್ತಮ ಮಾರ್ಗ ಯಾವುದು?”


ಆಗ ವ್ಯಾಸರು ಬಳಸುವ ಪದ ಬಹಳ ಅರ್ಥಪೂರ್ಣ:

“शान्तनवः पुनरेवाभ्यभाषत” “ಶಂತನುವಿನ ಮಗನಾದ ಭೀಷ್ಮನು ಮತ್ತೆ ಅದೇ ಮಾತನ್ನು ಹೇಳಿದರು.”

ಇಲ್ಲಿನ “पुनरेव” ಎಂಬ ಪದವೇ ಅತ್ಯಂತ ಗಂಭೀರ.
ಅದರ ಅರ್ಥ “ಮೊದಲ ಬಾರಿಗೆ ಹೇಳಿದನು” ಎಂದಲ್ಲ; “ಪೂರ್ವದಿಂದಲೂ ಪ್ರಸಿದ್ಧವಾಗಿದ್ದ ಸತ್ಯವನ್ನೇ ಪುನಃ ಪ್ರತಿಪಾದಿಸಿದನು.”


ಅಂದರೆ ವಿಷ್ಣುಸಹಸ್ರನಾಮ ಎಂಬುದು ಭೀಷ್ಮನ ವೈಯಕ್ತಿಕ ರಚನೆ ಅಲ್ಲ. ಅದು ಸನಾತನ ಪರಂಪರೆಯಲ್ಲಿ ಪೂರ್ವದಿಂದಲೂ ಹರಿದು ಬಂದ ಮಹಾಮಂತ್ರಸಮಾನ ಸ್ತೋತ್ರ. ಭೀಷ್ಮನು ತನ್ನ ಶರಶಯ್ಯೆಯ ಅಂತಿಮ ಕ್ಷಣಗಳಲ್ಲಿ, ಧರ್ಮದ ಸಾರವೇನು ಎಂದು ಕೇಳಿದ ಯುದ್ಧಿಷ್ಠಿರನಿಗೆ ಅದನ್ನೇ ಪುನಃ ಉಪದೇಶಿಸಿದನು. ಅಂದರೆ, ಧರ್ಮಗಳೆಲ್ಲ ಕೊನೆಗೆ ಯಾವ ಕಡೆ ಸೇರುತ್ತವೆ? ನಾಮಸ್ಮರಣೆ, ಭಗವದಾಶ್ರಯ, ಪರಮತತ್ತ್ವಚಿಂತನೆಗಳ ಕಡೆಗೆ ಎಂದು ಸಾರಾಂಶ. ಆದ್ದರಿಂದ ಇದು ಕೇವಲ “ಸ್ತೋತ್ರ”ವಲ್ಲ, ಎಲ್ಲಾ ಧರ್ಮಶಾಸ್ತ್ರಗಳ ಪರಿಪಾಕ. ಈ ವಿಷ್ಣುಸಹಸ್ರನಾಮ ಜ್ಞಾನ, ಭಕ್ತಿ, ವೈರಾಗ್ಯ, ಶರಣಾಗತಿ,  ಇವೆಲ್ಲ ಒಂದಾಗಿ ಸೇರುವ ಸಂಗಮ ಎನ್ನುವುದೇ ಇದರ ಮೂಲಾರ್ಥ.

ಇಲ್ಲಿ ಯುಧಿಷ್ಠಿರ ಕೇಳುವ ಪ್ರಶ್ನೆಗಳು ಮಾನವ-ಜೀವನದ ಪರಮತತ್ತ್ವವನ್ನು ಹುಡುಕುವ ಪ್ರಶ್ನೆಗಳು. ಎಲ್ಲ ಧರ್ಮಗಳನ್ನು, ಶಾಸ್ತ್ರಗಳನ್ನು, ರಾಜನೀತಿಗಳನ್ನು ಕೇಳಿದ ನಂತರ ಅವನು ಸಾರವನ್ನು ಕೇಳುತ್ತಾನೆ. ಅದಕ್ಕಾಗಿ ಅವನು ಹೀಗೆ ಪ್ರಶ್ನಿಸುತ್ತಾನೆ:

किमेकं दैवतं लोके? “ಈ ಲೋಕದಲ್ಲಿ ಒಂದೇ ಒಂದು ಪರಮ ದೈವತವು ಯಾವುದು?”

ಇಲ್ಲಿ “ಏಕಂ” ಎಂಬ ಪದ ಅತ್ಯಂತ ಮುಖ್ಯ. ಅನೇಕ ದೇವತೆಗಳ ನಡುವೆ ಶ್ರೇಷ್ಠ ಯಾರು ಎಂಬ ಪ್ರಶ್ನೆಯಷ್ಟೇ ಅಲ್ಲ ಇದು. ಎಲ್ಲ ಶಕ್ತಿಗಳ ಮೂಲವಾದ, ಎಲ್ಲ ದೇವತೆಗಳಿಗೂ ಆಧಾರವಾದ ಪರತತ್ತ್ವ ಯಾವುದು ಎಂಬ ಹುಡುಕಾಟ.

“ದೈವತ” ಎಂಬ ಪದಕ್ಕೂ ಇಲ್ಲಿ ಆಳವಾದ ಅರ್ಥವಿದೆ. ದೀಪಿಸುವುದು, ನಡೆಸುವುದು, ನಿಯಂತ್ರಿಸುವುದು; “ದಿವ್” ಧಾತುವಿನಿಂದ ಬಂದ ಪದ. ಯಾವನ ಆಜ್ಞೆಯಿಂದ ಸೂರ್ಯ ಉದಯಿಸುತ್ತಾನೆ, ವಾಯು ಬೀಸುತ್ತದೆ, ಕಾಲ ಸಾಗುತ್ತದೆ, ಜೀವಿಗಳು ವರ್ತಿಸುತ್ತವೆ? ಆ ಪರನಿಯಾಮಕ ಯಾರು?

ಅದಾದಮೇಲೆ:

किं वाप्येकं परायणम्? “ಮಾನವನಿಗೆ ಪರಮಾಶ್ರಯ ಯಾವುದು?”

“ಪರಾಯಣ” ಎಂದರೆ ಕೊನೆಗೆ ಸೇರುವ ತೀರ.
ಎಲ್ಲ ಪ್ರಯತ್ನಗಳ ಅಂತ್ಯದಲ್ಲಿ ಜೀವನು ನೆಲೆಸುವ ಆಶ್ರಯ. ಧರ್ಮ, ಅರ್ಥ, ಕಾಮ, ಮೋಕ್ಷ, ಇವೆಲ್ಲದರ ಪಾರಾಗಿ ಉಳಿಯುವ ಶಾಶ್ವತ ಆಧಾರ.

ನಂತರ ಅವನು ಇನ್ನೂ ಪ್ರಾಯೋಗಿಕವಾಗಿ ಕೇಳುತ್ತಾನೆ:

स्तुवन्तः कं? कमर्चन्तः? “ಯಾವನನ್ನು ಸ್ತುತಿಸಿದರೆ? ಯಾವನನ್ನು ಅರ್ಚಿಸಿದರೆ?”

ಇದು ಕೇವಲ ತತ್ತ್ವಚಿಂತನೆ ಅಲ್ಲ. ಜೀವನದಲ್ಲಿ ಆಚರಿಸಬಹುದಾದ ಮಾರ್ಗ ಯಾವುದು ಎಂಬ ಪ್ರಶ್ನೆ.

ಅದರ ಫಲವೇನು?

प्राप्नुयुर्मानवाः शुभम् “ಮಾನವರು ಶೀಘ್ರವಾಗಿ ಶುಭವನ್ನು ಹೇಗೆ ಹೊಂದುತ್ತಾರೆ?”

ಇಲ್ಲಿನ “ಶುಭ” ಎಂಬುದು ಕೇವಲ ಭೌತಿಕ ಮಂಗಳವಲ್ಲ. ಚಿತ್ತಶುದ್ಧಿ, ಭಯನಾಶ, ಧರ್ಮನಿಷ್ಠೆ, ಅಂತಃಶಾಂತಿ, ಮೋಕ್ಷಪ್ರಾಪ್ತಿ — ಇವೆಲ್ಲವೂ ಒಳಗೊಂಡ ಸಮಗ್ರ ಮಂಗಳ.

ಇಲ್ಲಿ ಆದಿ ಶಂಕರಾಚಾರ್ಯರು ಅವರ ಭಾಷ್ಯ ಅತ್ಯಂತ ಗಂಭೀರವಾದ ವೇದಾಂತಸಾರವನ್ನು ತೆರೆದಿಡುತ್ತದೆ. ಕಿಂ ವಾಪ್ಯೇಕಂ ಪರಾಯಣಮ್?” ಎಂಬ ಪ್ರಶ್ನೆಯನ್ನು ಶಂಕರರು ಮೋಕ್ಷಸಾಧನದ ಪ್ರಶ್ನೆ ಎಂದು ಅವರು ವಿವರಿಸುತ್ತಾರೆ. ಅವರು ನೀಡುವ ತಾತ್ಪರ್ಯ ಹೀಗಿದೆ:

“ಯಸ್ಯ ವಿಜ್ಞಾನಮಾತ್ರೇಣ ಆನಂದಲಕ್ಷಣೋ ಮೋಕ್ಷಃ ಪ್ರಾಪ್ಯತೇ” “ಯಾವುದನ್ನು ಅರಿತುಕೊಳ್ಳುವುದರಿಂದಲೇ ಆನಂದಸ್ವರೂಪವಾದ ಮೋಕ್ಷ ದೊರೆಯುತ್ತದೆ…”. ಇಲ್ಲಿ “ವಿಜ್ಞಾನ” ಎಂದರೆ ಕೇವಲ ಮಾಹಿತಿ ಅಥವಾ ಪಾಠದ ಜ್ಞಾನವಲ್ಲ. ಅನುಭವಸಹಿತ ಆತ್ಮಸಾಕ್ಷಾತ್ಕಾರ. ಬ್ರಹ್ಮತತ್ತ್ವದ ಅನುಭವವೇ “ವಿಜ್ಞಾನ”.

ಅದಕ್ಕಾಗಿ: “ಯದ್ವಿದ್ವಾನ್ ನ ಬಿಭೇತಿ ಕುತಶ್ಚನ”“ಯಾರನ್ನು ಅರಿತವನಿಗೆ ಯಾವುದರಿಂದಲೂ ಭಯವಿರುವುದಿಲ್ಲ.”

ಭಯದ ಮೂಲವೇ ದ್ವೈತ. “ನಾನು” ಮತ್ತು “ಇನ್ನೊಂದು” ಎಂಬ ಭೇದ. ಆದರೆ ಎಲ್ಲವೂ ಅದೇ ಪರಬ್ರಹ್ಮಸ್ವರೂಪ ಎಂದು ಅನುಭವವಾದಾಗ ಭಯಕ್ಕೆ ಸ್ಥಳವೇ ಇಲ್ಲ.

ಇದು ಭೃಹದಾರಣ್ಯಕ ಉಪನಿಷತ್ತಿನ ನ ಪ್ರಸಿದ್ಧ ವಾಕ್ಯವನ್ನು ನೆನಪಿಸುತ್ತದೆ: “द्वितीयाद्वै भयं भवति “ಎರಡನೆಯದ್ದರಿಂದಲೇ ಭಯ ಹುಟ್ಟುತ್ತದೆ.”

ಮುಂದಿನ ಅರ್ಥ ಇನ್ನೂ ಆಳವಾದುದು: “ಯತ್ ಪ್ರವಿಷ್ಟಸ್ಯ ನ ವಿದ್ಯತೇ ಪುನರ್ಭವಃ” “ಯಾವುದನ್ನು ಪ್ರಾಪ್ತನಾದವನಿಗೆ ಮತ್ತೆ ಜನ್ಮವಿಲ್ಲ.”

ಇದು ಮೋಕ್ಷದ ನಿರ್ವಚನೆ. ಸಂಸಾರಚಕ್ರಕ್ಕೆ ಮರುಪ್ರವೇಶವಿಲ್ಲದ ಸ್ಥಿತಿ.

ನಂತರ ಶಂಕರರು ಮುಂಡಕ ಉಪನಿಷತ್ತಿನ ಮಹಾವಾಕ್ಯವನ್ನು ಉಲ್ಲೇಖಿಸುತ್ತಾರೆ:

“ब्रह्मवेद ब्रह्मैव भवति” “ಬ್ರಹ್ಮವನ್ನು ಅರಿತವನು ಬ್ರಹ್ಮವೇ ಆಗುತ್ತಾನೆ.”

ಮುಂದೆ ಅವರು ಇನ್ನೂ ನಿರ್ಣಾಯಕವಾಗಿ ಹೇಳುತ್ತಾರೆ: “नान्यः पन्था विद्यतेऽयनाय” “ಇದನ್ನು ಬಿಟ್ಟು ಮತ್ತೊಂದು ಮಾರ್ಗವೇ ಇಲ್ಲ.” (ಶ್ವೇತಶ್ವತರ ಉಪನಿಷತ್ತು). ಮಾನವನು ಎಷ್ಟೇ ಮಾರ್ಗಗಳಲ್ಲಿ ಅಲೆದರೂ, ಕೊನೆಗೆ ತಲುಪಬೇಕಾದ ತೀರ ಪರಬ್ರಹ್ಮಸ್ವರೂಪ.

ಆದ್ದರಿಂದ “ಪರಾಯಣ” ಎಂದರೆ:

  • ಕೊನೆಯ ಆಶ್ರಯ
  • ಅಂತಿಮ ಗುರಿ
  • ಭಯನಾಶಕ ತತ್ತ್ವ
  • ಪುನರ್ಜನ್ಮನಾಶಕ ಜ್ಞಾನ
  • ಅರಿತವನೇ ಅದಾಗುವ ಪರಮಸತ್ಯ

ಹೀಗಾಗಿ ಯುದ್ಧಿಷ್ಠಿರನ ಎರಡನೇ ಪ್ರಶ್ನೆ: “ಮಾನವನ ಜೀವನದ ಅಂತಿಮ ತೀರ ಯಾವುದು?” ಎಂಬುದಾಗಿದೆ. ಭೀಷ್ಮನ ಉತ್ತರದಲ್ಲಿ ಆ ಪರಾಯಣವನ್ನು ವಿಷ್ಣು ಸ್ವರೂಪದಲ್ಲಿ ಪ್ರತಿಪಾದಿಸಲಾಗುತ್ತದೆ: ನಾಮ, ರೂಪ, ಉಪಾಸನೆಗಳ ಮೂಲಕ ಮನಸ್ಸನ್ನು ಏಕಾಗ್ರಗೊಳಿಸಿ, ಕೊನೆಗೆ ಅದೇ ನಿರ್ಗುಣ ಪರಬ್ರಹ್ಮದಲ್ಲಿ ಲೀನಗೊಳಿಸುವ ಮಾರ್ಗವಾಗಿ.


ಯುಧಿಷ್ಠಿರ ಕೇಳಿದ ಈ ಆರು ಪ್ರಶ್ನೆಗಳೇ ವಿಷ್ಣು ಸಹಸ್ರನಾಮದ ಮೂಲಭೂತ ಆಧಾರ. ಇವು ಕೇವಲ ಪ್ರಶ್ನೆಗಳಲ್ಲ — ಮಾನವಜೀವನದ ಸಂಪೂರ್ಣ ಆಧ್ಯಾತ್ಮಿಕ ಹುಡುಕಾಟದ ಸಾರ. ಇವುಗಳನ್ನು ಒಂದೊಂದಾಗಿ ನೋಡಿದರೆ:

1. किमेकं दैवतं लोके? “ಈ ಲೋಕದಲ್ಲಿ ಪರಮ ದೈವತ ಯಾವುದು?”

ಅನೇಕ ದೇವತೆಗಳು, ಅನೇಕ ಶಕ್ತಿಗಳು, ಅನೇಕ ಆರಾಧನೆಗಳ ನಡುವೆ ಎಲ್ಲಕ್ಕೂ ಮೂಲವಾದ ಪರತತ್ತ್ವ ಯಾವುದು?


2. किं वा एकं परायणम्? “ಮಾನವನಿಗೆ ಅಂತಿಮ ಆಶ್ರಯ ಯಾವುದು?”

ಜೀವನದ ಎಲ್ಲ ಪ್ರಯತ್ನಗಳು ಕೊನೆಗೆ ಸೇರುವ ತೀರ ಯಾವುದು? ಭಯ, ದುಃಖ, ಜನನ–ಮರಣಗಳಾಚೆ ಇರುವ ನಿತ್ಯ ಆಶ್ರಯ ಯಾವುದು?


3. स्तुवन्तः कम्? “ಯಾರನ್ನು ಸ್ತುತಿಸುತ್ತ?” ಸ್ತೋತ್ರ, ಕೀರ್ತನೆ, ನಾಮಸ್ಮರಣೆ — ಇವುಗಳ ಗುರಿ ಯಾರು?


4. कमर्चन्तः? “ಯಾರನ್ನು ಅರ್ಚಿಸುತ್ತ?” ಉಪಾಸನೆ, ಪೂಜೆ, ಧ್ಯಾನ — ಯಾವ ತತ್ತ್ವದ ಕಡೆ ಮುಖ ಮಾಡಬೇಕು?


5. प्राप्नुयुर्मानवाः शुभम्? “ಮಾನವರು ಶುಭವನ್ನು ಹೇಗೆ ಹೊಂದುತ್ತಾರೆ? ಇಲ್ಲಿನ “ಶುಭ” ಎಂದರೆ ಕೇವಲ ಐಹಿಕ ಮಂಗಳವಲ್ಲ. ಚಿತ್ತಶುದ್ಧಿ, ಶಾಂತಿ, ಧರ್ಮನಿಷ್ಠೆ, ಭಯರಹಿತತೆ, ಮೋಕ್ಷಪ್ರಾಪ್ತಿ — ಸಮಗ್ರ ಮಂಗಳ.


6. को धर्मः सर्वधर्माणां भवतः परमो मतः? “ಎಲ್ಲ ಧರ್ಮಗಳಲ್ಲಿಯೂ ಶ್ರೇಷ್ಠ ಧರ್ಮ ಯಾವುದು?” ಇದು ಅತ್ಯಂತ ಗಂಭೀರ ಪ್ರಶ್ನೆ. ವರ್ಣಧರ್ಮ, ಆಶ್ರಮಧರ್ಮ, ರಾಜಧರ್ಮ, ಯಜ್ಞ, ದಾನ, ತಪಸ್ಸು, ಇವೆಲ್ಲಕ್ಕೂ ಮೀರಿ ಉಳಿಯುವ ಧರ್ಮ ಯಾವುದು?


7. किं जपन् मुच्यते जन्तुः जन्मसंसारबन्धनात्? “ಯಾವ ಜಪವನ್ನು ಮಾಡಿದರೆ ಜೀವಿ ಜನನ–ಮರಣ ಬಂಧನದಿಂದ ಮುಕ್ತನಾಗುತ್ತಾನೆ?” ಇದು ಪ್ರಶ್ನೆಗಳ ಪರಾಕಾಷ್ಠೆ. ಮಾನವನ ಅಂತಿಮ ಸಮಸ್ಯೆ — ಸಂಸಾರಬಂಧನ. ಅದರಿಂದ ವಿಮುಕ್ತಿ ನೀಡುವ ಸಾಧನ ಯಾವುದು?

ಈ ಎಲ್ಲಾ ಪ್ರಶ್ನೆಗಳಿಗೆ ಭೀಷ್ಮ ಕೊಡುವ ಒಂದೇ ಸಮಗ್ರ ಉತ್ತರ: ಶ್ರೀ ವಿಷ್ಣುವಿನ ಸಹಸ್ರನಾಮ ಸ್ಮರಣೆಅಂದರೆ ಸಹಸ್ರನಾಮವು ಕೇವಲ “ಸಾವಿರ ಹೆಸರುಗಳ ಪಟ್ಟಿ” ಅಲ್ಲ; ಮಾನವನು ಕೇಳಬಹುದಾದ ಅತ್ಯುನ್ನತ ಪ್ರಶ್ನೆಗಳಿಗೆ ನೀಡಿದ ಸಂಕ್ಷಿಪ್ತ ವೇದಾಂತ ಉತ್ತರ. ಅದರ ಕಾರಣಕ್ಕಾಗಿ ಆದಿ ಶಂಕರರು ಸಹಸ್ರನಾಮವನ್ನು ಕೇವಲ ಭಕ್ತಿಗ್ರಂಥವಲ್ಲ, ಉಪನಿಷತ್ತಿನ ಸಾರವೆಂದು ನೋಡುತ್ತಾರೆ.







(to be continued) 


Comments